ಚಿತ್ರದುರ್ಗ,ಫೆಬ್ರುವರಿ03:
ಪ್ರೀತಿಯ ವಿಚಾರಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿಯನ್ನು ಡಯಲ್ 112
ವಾಹನದ ಪೊಲೀಸರು ರಕ್ಷಣೆ ಮಾಡಿರುವ ಘಟನೆ ಹೊಸದುರ್ಗ ತಾಲ್ಲೂಕಿನಲ್ಲಿ ನಡೆದಿದೆ.
ಫೆಬ್ರುವರಿ 2ರಂದು ಸಂಜೆ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ನಿವಾಸಿ ಸುಮಾರು 21 ವರ್ಷದ ಯುವತಿಯೊಬ್ಬಳು ತನ್ನ ಪ್ರೀತಿಯ ವಿಷಯಕ್ಕೆ ಮನದೊಂದು ಹೊಸದುರ್ಗ ತಾಲ್ಲೂಕಿನ ಕುಂದೂರು ಮತ್ತು ಬಾಗೂರು ಗ್ರಾಮಗಳ ಮಧ್ಯದ ರಸ್ತೆಯ ಪಕ್ಕದಲ್ಲಿ ವಿಷ ಕುಡಿಯಲು ಪ್ರಯತ್ನಿಸುತ್ತಿರುವಾಗ ಸಾರ್ವಜನಿಕರು ಡಯಲ್ 112ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ತಕ್ಷಣವೇ ಸಮೀಪದಲ್ಲಿಯೇ ಗಸ್ತಿನಲ್ಲಿದ್ದ ಹೊಯ್ಸಳ-7 ಡಯಲ್ 112 ವಾಹನದ ಪೊಲೀಸರು ಸ್ಥಳಕ್ಕೆ ಹೋಗಿ ವಿಷ ಸೇವಿಸುತ್ತಿದ್ದ ಯುವತಿಯನ್ನು ರಕ್ಷಿಸಿ ಯುವತಿಯ ಬಳಿಯಿದ್ದ ಕ್ರಿಮಿನಾಶಕ ಬಾಟಲಿಯನ್ನು ವಶಕ್ಕೆ ಪಡೆದು ಕೂಡಲೇ ಹೊಸದುರ್ಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಮಹಿಳಾ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಹೆಚ್ಚಿನ ವಿಚಾರಣೆಗಾಗಿ ಹೊಸದುರ್ಗ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿರುತ್ತಾರೆ.
ಯುವತಿಯ ಪ್ರಾಣ ರಕ್ಷಿಸಿದ ಹೊಯ್ಸಳ-7 ಡಯಲ್ 112 ವಾಹನದ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಶ್ಲಾಘಿಸಿದ್ದಾರೆ.