ನಿತ್ಯವಾಣಿ,ಹಿರಿಯೂರು,(ಮೇ.22): ಸರ್ಕಾರ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಫಾರ್ಮಾ ಸಿಸ್ಟ್ ನಡೆಸುತಿದ್ದ ಖಾಸಗಿ ಕ್ಲಿನಿಕ್ ಮೇಲೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ತಡರಾತ್ರಿ ದಾಳಿ ಮಾಡಿರುವ ಘಟನೆ ಹಿರಿಯೂರಿನ ಜವನಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಿರಿಯೂರು ತಹಶೀಲ್ದಾರ್ ಜಿ.ಎಚ್. ಸತ್ಯನಾರಾಯಣ, ಸಿಪಿಐ ರಾಘವೇಂದ್ರ, ಟಿಎಚ್ಓ ವೆಂಕಟೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ಸಾವಿರಾರು ಮೌಲ್ಯದ ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ.
ವಿವೇಕಾನಂದ ಬಂಧಿತ ಆರೋಪಿಯಾಗಿದ್ದು, ಈತನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಾರ್ಮಾ ಸಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದನು.
ಸರ್ಕಾರದಿಂದ ಬರುವ ಔಷದಿ, ಇಂಜೆಕ್ಷನ್, ಮಾತ್ರೆಗಳು, ಸಿರೆಂಜ್ಗಳು, ಹಾಗೂ ಸರ್ಕಾರದ ಔಷಧಿಗಳನ್ನು ದುರುಪಯೋಗ ಪಡಿಸಿಕೊಂಡು ತನ್ನ ತಾಲೂಕಿನ ಜವನಗೊಂಡನಹಳ್ಳಿ ಗ್ರಾಮದದಲ್ಲಿರುವ ಮನೆಯಲ್ಲಿ ಖಾಸಗಿ ಕ್ಲಿನಿಕ್ ಇಟ್ಟುಕೊಂಡು ಜನರಿಗೆ ಅಥವಾ ರೋಗಿಗಳಿಗೆ ಮಾರಾಟ ಮಾಡಿ ಹಣಗಳಿಸುತ್ತಿದ್ದನು ಎನ್ನಲಾಗಿದೆ.
ಈತನು ಅಧಿಕೃತ ವೈದ್ಯರಲ್ಲದಿದ್ದರೂ ಸಹ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ಹಾಗೂ ಸರ್ಕಾರಿ ಆಸ್ಪತ್ರೆಯ ಔಷಧಿಗಳನ್ನು ದುರುಪಯೋಗ ಪಡಿಸಿಕೊಂಡು ಮಾರಾಟ ಮಾಡಿ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದನು.
ಈತನ ಮೇಲೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.