ನಿತ್ಯವಾಣಿ,ಚಿತ್ರದುರ್ಗ (ಮೇ. 22 ) : ಕೊರೊನಾ ಸೋಂಕಿನ ಸರಪಳಿ ತುಂಡರಿಸುವ ಉದ್ದೇಶದಿಂದ ಜಿಲ್ಲಾಡಳಿತ ಘೋಷಿಸಿರುವ ಸಂಪೂರ್ಣ ಲಾಕ್ಡೌನ್ಗೆ ಮೊದಲ ದಿನವಾದ ಶನಿವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಶನಿವಾರ ಬೆಳಿಗ್ಗೆ 6ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಸಂಪೂರ್ಣ ಲಾಕ್ಡೌನ್ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅದರಂತೆ ಪೊಲೀಸರು ಅನುಷ್ಠಾನಕ್ಕೆ ಕ್ರಮ ಕೈಗೊಂಡರು. ಬ್ಯಾರಿಕೇಡ್ಗಳನ್ನು ಹೆಚ್ಚಿಸಿ ಸಂಚಾರ ನಿರ್ಬಂಧಿಸಿದರು. ಬಹುತೇಕರು ಮನೆಗಳಲ್ಲೇ ಉಳಿದು ಸಹಕರಿಸಿದ್ದರಿಂದ ಜಿಲ್ಲೆಯು ಸ್ತಬ್ಧವಾಗಿತ್ತು.
ಆಸ್ಪತ್ರೆಗಳಿಗೆ, ಮೆಡಿಕಲ್ ಸ್ಟೋರ್ಗಳಿಗೆ ಹೋಗುವವರಿಗೆ ಮಾತ್ರ ಅವಕಾಶ ಕೊಟ್ಟರು. ಹಾಲಿನ ಅಂಗಡಿಗಳು ತೆರೆದಿದ್ದವು. ಜನರು ಹಾಗೂ ವಾಹನಗಳ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅಲ್ಲಲ್ಲಿ ಹಾಗೂ ಹೊರವಲಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬಂದಿದ್ದವರಿಗೆ ಪೊಲೀಸರು, ಬುದ್ಧಿವಾದ ಹೇಳಿ ಮನೆಗಳಿಗೆ ವಾಪಸ್ ಕಳುಹಿಸಿದರು. ಮಾಸ್ಕ್ ಧರಿಸದವರ ವಿರುದ್ಧ ಪ್ರಕರಣ ದಾಖಲಿಸಿದರು.
ಮಾರುಕಟ್ಟೆ ಹಾಗೂ ಅಲ್ಲಲ್ಲಿ ಆರಂಭಿಸಿದ್ದ ತಾತ್ಕಾಲಿಕ ಸಗಟು ತರಕಾರಿ ಮಾರುಕಟ್ಟೆಗಳನ್ನು ಕೂಡ ಬಂದ್ ಮಾಡಿಸಲಾಗಿತ್ತು. ಮಾರುಕಟ್ಟೆಗಳಲ್ಲಿ ಚಟುವಟಿಕೆ ಇರಲಿಲ್ಲ. ರಸ್ತೆಬದಿಗಳಲ್ಲಾಗಲೀ, ತಳ್ಳುಗಾಡಿಗಳಲ್ಲಾಗಲಿ ತರಕಾರಿ ಅಥವಾ ಹಣ್ಣುಗಳನ್ನು ಮಾರುವುದಕ್ಕೂ ಅವಕಾಶ ಇರಲಿಲ್ಲ. ಅಂತರ ಜಿಲ್ಲೆ ಹಾಗೂ ಅಂತರ ರಾಜ್ಯಗಳ ನಡುವೆ ಸಂಚರಿಸುವ ಸರಕು ಸಾಗಣೆ ವಾಹನಗಳಿಗೆ ಮಾತ್ರವೇ ಅವಕಾಶ ಕೊಡಲಾಗಿತ್ತು. ಔಷಧಿ ಅಂಗಡಿಗಳ ಬಳಿಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರಲಿಲ್ಲ.ಲಾಕ್ಡೌನ್ ನಡುವೆಯೂ ಅನವಶ್ಯವಾಗಿ ಸಂಚರಿಸುತ್ತಿದ್ದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದರು. ವಾಹನಗಳನ್ನು ಜಪ್ತಿ ಮಾಡಿದರು.
ಭಾನುವಾರವೂ ಸಂಪೂರ್ಣ ಲಾಕ್ಡೌನ್ ಮುಂದುವರಿಯಲಿದ್ದು, ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಲಾಕ್ಡೌನ್ ನಡುವೆಯೂ ಸಂಚರಿಸುತ್ತಿದ್ದ ವಾಹನ ಸವಾರರ ತಡೆದು, ಕಾರಣ ಕೇಳಿದರು. ಸಕಾರಣ ಇಲ್ಲದೆ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದರು.
ಔಷಧಿ ಅಂಗಡಿ, ಆಸ್ಪತ್ರೆಗಳನ್ನ ಹೊರತುಪಡಿಸಿದರೆ ದಿನಸಿ, ತರಕಾರಿ, ಎಲೆಕ್ಟ್ರಿಕಲ್, ಹೋಟೆಲ್, ಗ್ಯಾರೇಜ್,ಸಲೂನ್, ಬ್ಯೂಟಿಪಾರ್ಲರ್, ,ವಾಣಿಜ್ಯ ಸಂಕೀರ್ಣ, ಆಟೋ ಸಂಚಾರ ಎಲ್ಲವೂ ಬಂದ್ ಆಗಿದ್ದವು. ಹೋಟೆಲ್ಗಳಲ್ಲಿ ಆನ್ಲೈನ್ ಪಾರ್ಸೆಲ್, ಕೃಷಿ ಚಟುವಟಿಕೆಗೆ ಮಾತ್ರ ಅವಕಾಶ ಇತ್ತು. ಜನ, ವಾಹನ ಸಂಚಾರ ಇಲ್ಲದೆ ಪ್ರಮುಖ ರಸ್ತೆ, ವೃತ್ತಗಳು ಬಿಕೋ ಎನ್ನುತ್ತಿದ್ದವು. ಸಮಯ ಕಳೆಯುತ್ತಿದ್ದಂತೆ ಕೋಟೆ ನಗರಿ ಅಕ್ಷರಶಃ ಸ್ತಬ್ದವಾಯಿತು. ಸಂಪೂರ್ಣ ಲಾಕ್ಡೌನ್ ನ ಮೊದಲ ದಿನ ಯಶಸ್ವಿಯಾಯಿತು.