ಚಿತ್ರದುರ್ಗ, ನಿತ್ಯವಾಣಿ, ( ಏ. 24) : ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ವೀಕೆಂಡ್ ಕಫ್ರ್ಯೂಗೆ ಕೋಟೆ ನಗರಿ ಚಿತ್ರದುರ್ಗದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆ ಬಹುತೇಕ ಸ್ತಬ್ಧವಾಗಿದ್ದು, ಜನರು ಮನೆಯಲ್ಲಿಯೇ ಇದ್ದು,ವೀಕೆಂಡ್ ಕಫ್ರ್ಯೂಗೆ ಬೆಂಬಲ ಸೂಚಿಸಿದ್ದಾರೆ.
ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಘೋಷಿಸಿರುವ ವಾರಾಂತ್ಯ ಕಫ್ರ್ಯೂ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ಬಂದಿದ್ದು, ವಾಣಿಜ್ಯ ವಹಿವಾಟು, ಜನ, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಬೆಳಿಗ್ಗೆ 6 ಗಂಟೆಯಿಂದ 10ರ ವರೆಗೆ ವರೆಗೆ ಔಷಧ ಅಂಗಡಿಗಳು, ತರಕಾರಿ, ಹಾಲು, ದಿನಪತ್ರಿಕೆ, ದಿನಸಿ ಅಂಗಡಿ, ಬೇಕರಿ ಸೇರಿದಂತೆ ಅಗತ್ಯವಸ್ತುಗಳ ಮಾರಾಟ ಮಳಿಗೆಗಳು ತೆರೆದಿದ್ದವು. ವಿರಳ ಸಂಖ್ಯೆಯಲ್ಲಿದ್ದ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. 10 ಗಂಟೆ ನಂತರ ಔಷಧ ಅಂಗಡಿಗಳನ್ನು ಬಿಟ್ಟು ಉಳಿದೆಲ್ಲ ಅಂಗಡಿಗಳು ಮುಚ್ಚಿದವು.ಪೊಲೀಸರು ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಅನಗತ್ಯವಾಗಿ ಸಂಚರಿಸುವವರನ್ನು ತಡೆದು, ಮರಳಿ ಮನೆಗೆ ಕಳುಹಿಸಿದರು. ವ್ಯಾಪಾರಸ್ಥರು ಹಾಗೂ ಗ್ರಾಹಕರನ್ನು ಮನೆಗೆ ಕಳುಹಿಸಿದರು.ಆಸ್ಪತ್ರೆಗೆ, ಮದುವೆಗೆ ತೆರಳುವವರಿಗೆ ಮಾತ್ರ ಅವಕಾಶ ಕಲ್ಪಿಸಿದ್ದರು.
ಕಫ್ರ್ಯೂ ಜಾರಿಯಲ್ಲಿದ್ದರೂ, ಸಾರಿಗೆ ಬಸ್ಗಳ ಸಂಚಾರ ಇದ್ದರೂ ಪ್ರಯಾಣಿಕರು ಇರಲಿಲ್ಲ. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹಲವು ಬಸ್ಗಳು ಬೇರೆ, ಬೇರೆ ನಗರ, ಪಟ್ಟಣಗಳಿಗೆ ತೆರಳಲು ನಿಂತಿದ್ದರೂ ಪ್ರಯಾಣಿಕರಿರಲಿಲ್ಲ. ಆದರೆ, ಪ್ರಯಾಣಿಕರೇ ಇರಲಿಲ್ಲ. ನಿಲ್ದಾಣ ಖಾಲಿಯಾಗಿತ್ತು. ನಿಲ್ದಾಣದಲ್ಲಿ ಅನಾವಶ್ಯಕವಾಗಿ ನಿಂತಿದ್ದವರನ್ನು ಪೊಲೀಸರು ಕಳುಹಿಸಿದರು.
ಜನರ ಅನುಕೂಲತೆಗೆಂದು ಆಟೋರಿಕ್ಷಾ ಕಾರ್ಯಚರಣೆ ನಡೆಸಿದ್ದು, ಜನರು ಅಗತ್ಯ ಕೆಲಸ ಇದ್ದರೇ ಮಾತ್ರ ಓಡಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.ದ್ವಿಚಕ್ರ ವಾಹನ, ಖಾಸಗಿ ವಾಹನಗಳಲ್ಲಿ ಸಂಚರಿಸುವವರನ್ನು ಅಲ್ಲಲ್ಲಿ ತಡೆದು ಪೊಲೀಸರು ವಿಚಾರಿಸುತ್ತಿರುವುದು ಕಂಡು ಬಂದಿತು.ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಪೊಲೀಸರು ಸಂಚರಿಸಿ, ವ್ಯಾಪಾರಸ್ಥರನ್ನು ಹಾಗೂ ಗ್ರಾಹಕರನ್ನು ಮನೆಗೆ ತೆರಳುವಂತೆ ಸೂಚಿಸಿದರು.