ನಿತ್ಯವಾಣಿ,ಚಿತ್ರದುರ್ಗ,(ನ.3) : ಕೋವಿಡ್ ಲಸಿಕಾ ಪ್ರಗತಿ ಕುಂಠಿತ ಗೊಂಡ ಬೆಳಘಟ್ಟ ಗ್ರಾಮದ ಮುತ್ತಯ್ಯನಹಟ್ಟಿ, ಗೋನುರು ಮತ್ತು ನಗರ ಆರೋಗ್ಯ ಕೇಂದ್ರವ್ಯಾಪ್ತಿಯ ಬ್ಯಾಂಕ್ ಕಾಲೋನಿಗಳಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಿಕೆ ಪ್ರಗತಿ ಕುಂಠಿತವಾಗಿರುವುದನ್ನು ಪರಿಶೀಲಿಸಲು ಮಂಗಳವಾರ ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮತ್ತು ತಂಡ ಲಸಿಕೆ ಪ್ರಗತಿ ಕಾಣದ ಸ್ಥಳಗಳಿಗೆ ಭೇಟಿ ನೀಡಿ ಜನರೊಂದಿಗೆ ವೈಯ್ಯಕ್ತಿಕ ಸಮಾಲೋಚನೆ ನಡೆಸುವುದರ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವತು ” ಕುಂಟು ನೆಪ ಹೇಳಿ ಲಸಿಕೆ ಪಡೆಯುವುದನ್ನು ತಪ್ಪಿಸಿಕೊಂಡರೆ ಸರ್ಕಾರಕ್ಕೇನೂ ನಷ್ಟವಿಲ್ಲ ನಿಮ್ಮ ಆರೋಗ್ಯಕ್ಕಾಗಿ ನಮ್ಮ ಭಾರತದ ವಿಜ್ಞಾನಿಗಳು ಲಸಿಕೆಯನ್ನು ಕಂಡು ಹಿಡಿದಿದ್ದಾರೆ ಇದಕ್ಕಾಗಿ ಭಾರತ ಸರ್ಕಾರ ಕೋಟ್ಯಾಂತರ ಹಣವನ್ನು ಖರ್ಚುಮಾಡಿದೆ ನಿಮ್ಮ ಆರೋಗ್ಯದ ಜೊತೆಗೆ ನಮ್ಮ ವಿಜ್ಞಾನಿಗಳ ಶ್ರಮಕ್ಕೆ ಬೆಲೆಕೊಟ್ಟು ಲಸಿಕೆ ಪಡೆಯಿರಿ” ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ “ಜ್ವರ ಬರುತ್ತದೆ ಕೈ ನೋವಾಗುತ್ತದೆ ಎಂಬ ಕಾರಣದಿಂದ ಲಸಿಕೆ ಹಾಕಿಸುವುದನ್ನು ಮುಂದೂಡಬೇಡಿ ಕೈನೋವು ತಾತ್ಕಾಲಿಕ ಆದರೆ ಲಸಿಕೆಯ ಲಾಭ ನಿರಂತರವಾಗಿರುತ್ತದೆ” ಎಂದರು. ಕಾರ್ಯಕ್ರಮದಲ್ಲಿ ಬೆಳಗಟ್ಟ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಡಿ.ಮಹೇಶ್, ಪರ್ವಿನ್, ಸಮೂದಾಯ ಆರೋಗ್ಯಾಧಿಕಾರಿ ಮಂಜುಶ್ರೀ, ಪಿ.ಡಿ.ಓ.ಯರ್ರಿಸ್ವಾಮಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.