ನಿತ್ಯವಾಣಿ,ಚಿತ್ರದುರ್ಗ,(ಜೂ.11) : ಕೇಂದ್ರ ಸರ್ಕಾರ ಲಾಕ್ ಡೌನ್ ಸಮಯದಲ್ಲಿ ಜನತೆ ಉಪವಾಸದಿಂದ ಇರಬಾರದೆಂದು ಪಡಿತರೆ ಅಂಗಡಿಯ ಮೂಲಕ ಮನೆಗೆ ಇಂತಿಷ್ಟು ಅಕ್ಕಿಯನ್ನು ವಿತರಣೆ ಮಾಡುತ್ತಿದೆ ಆದರೆ ಇದರ ಪ್ರಯೋಜನವನ್ನು ಪೂರ್ಣವಾಗಿ ಫಲಾನುಭವಿಗಳು ಪಡೆಯಬೇಕಿದೆ ಬೇರೆಯವರಿಗೆ ಮಾರಾಟ ಮಾಡುವುದನ್ನು ಬಿಡಬೇಕೆಂದು ಶಾಸಕರಾದ ತಿಪ್ಪಾರೆಡ್ಡಿ ತಿಳಿಸಿದರು.
ನಗರದ ಮಠದ ಕುರುಬರ ಹಟ್ಟಿ ವ್ಯಾಪ್ತಿಯ ಮಲ್ಲನಕಟ್ಟೆ, ಎಂ.ಕೆ.ಹಟ್ಟಿ ಸಿಬಾರ ಹಾಗೂ ಗುತ್ತಿನಾಡು ಗ್ರಾಮಗಳಲ್ಲಿ ಶಾಸಕ ತಿಪ್ಪಾರೆಡ್ಡಿಯವರು ಸ್ವಂತವಾಗಿ 2000 ಜನತೆಗೆ ಆಹಾರ ಕಿಟ್ಗಳನ್ನು ತಯಾರು ಮಾಡಿ ಇಂದು ನಡೆದ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಬಡವರಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿಯನ್ನು ಕೆಲವು ವರ್ತಕರು ಖರೀಧಿಸಿ ಪಾಲಿಷ್ ಮಾಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆಯವರ ಜೊತೆ ಮಾತನಾಡುವುದಾಗಿ ಶಾಸಕ ಹೇಳಿದರು.
ಬಡವರು ಒಬ್ಬರಿಗೆ ಕೇಂದ್ರ ಸರ್ಕಾರ ಹತ್ತು ಕೆ.ಜಿ.ಅಕ್ಕಿಯನ್ನು ನೀಡುತ್ತಿದೆ. ಒಂದು ಮನೆಯಲ್ಲಿ ಐದು ಮಂದಿಯಿದ್ದರೆ ಐವತ್ತು ಕೆ.ಜಿ.ಅಕ್ಕಿ ಸಿಗುತ್ತದೆ. ಲಾರಿಗಳಲ್ಲಿ ಬಂದರೆ ಗೊತ್ತಾಗುತ್ತದೆಂದು ಕೆಲವು ವರ್ತಕರು ಆಟೋಗಳಲ್ಲಿ ಹಳ್ಳಿ ಹಳ್ಳಿ ಸುತ್ತಾಡಿ ಅಕ್ಕಿಯನ್ನು ಖರೀಧಿಸಿ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಹಣ ಗಳಿಕೆ ದಂಧೆಯಲ್ಲಿ ತೊಡಗಿದ್ದಾರೆ. ಅಂತಹವರ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಶಾಸಕರು ತಿಳಿಸಿದರು.
ಕೊರೋನಾ ಎರಡನೆ ಅಲೆ ತೀವ್ರವಾಗಿದೆ. ಇನ್ನು ಮೂರನೆ ಅಲೆ ಮತ್ತಷ್ಟ ಭೀಕರವಾಗಿರಬಹುದು. ಚೀನಾದಿಂದ ಹುಟ್ಟಿಕೊಂಡ ಕೊರೋನಾ ವೈರಸ್ನ್ನು ನಿಗ್ರಹಿಸುವುದು ಕಷ್ಟ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಲಾಕ್ಡೌನ್ ಘೋಷಿಸಿ ಕೋವಿಡ್-19 ನಿಗ್ರಹಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದೆ.ಅದನ್ನು ಅನುಸರಿಸಬೇಕು. ಇಲ್ಲದಿದ್ದರೆ ಕೊರೋನಾ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಮುರುಘಾಮಠದ ಡಾ.ಶಿವಮೂರ್ತಿ ಶರಣರು, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಉಪಾಧ್ಯಕ್ಷ ಶಿವಣ್ಣಾಚಾರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಸಂಪತ್, ಜಿ.ಪಂ,ಮಾಜಿ ಸದಸ್ಯ ಆರ್.ನರಸಿಂಹರಾಜ, ಮಠದಕುರುಬರಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತ, ಉಪಾಧ್ಯಕ್ಷ ನಿಂಗಪ್ಪ, ಸದಸ್ಯರು, ಬಿಜೆಪಿ.ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ಉಪಸ್ಥಿತರಿದ್ದರು. ಸುದ್ದಿಗಾಗಿ, ಜಾಹೀರಾತಿಗಾಗಿ 👉 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020