¸ಚಿತ್ರದುರ್ಗ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ವತಿಯಿಂದ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮಗಳ ಗುಚ್ಛದ ಮೊದಲ ಕಾರ್ಯಕ್ರಮ ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರೀಕೃತ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದ ಬ್ಯಾಂಕುಗಳಿಗೆ ತೆರಳಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳನ್ನು ಪರಿಚಯಿಸಲಾಯಿತು, ಪ್ರಾಧಿಕಾರದ ಕನ್ನಡಪರ ಆಶಯಗಳನ್ನು ಅನುಷ್ಠಾನಗೊಳಿಸುವ ಮಹತ್ವದ ಕಾರ್ಯಕ್ಕೆ ಸಹಕಾರ ನೀಡಬೇಕು ಹಾಗೂ ಬ್ಯಾಂಕಿನ ವ್ಯವಹಾರಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಬೇಕು ಎಂಬ ಮನವಿಯನ್ನು ಆಯಾ ಬ್ಯಾಂಕುಗಳ ವ್ಯವಸ್ಥಾಪಕರುಗಳಿಗೆ ಸಲ್ಲಿಸಲಾಯಿತು.
ಕನ್ನಡಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಚಿತ್ರದುರ್ಗ ಜಿಲ್ಲಾ ಮಟ್ಟದಲ್ಲಿ ಕನ್ನಡ ಜಾಗೃತಿ ಸಮಿತಿಗೆ ಸರ್ಕಾರದ ಆದೇಶಾನುಸಾರ ನೇಮಕಗೊಂಡ ಅಧಿಕಾರೇತರ ಸದಸ್ಯರಾದ ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ದಯಾವತಿ ಪುತ್ತೂರ್ಕರ್, ಟಿ.ಮಧು, ಗಾಯಕರಾದ ಕೆ.ಗಂಗಾಧರ, ಹಿಮಂತರಾಜು, ಸಿ.ಸಿದ್ಧೇಶ್ ಅಳಗವಾಡಿ ಮುಂತಾದವರು ಉಪಸ್ಥಿತರಿದ್ದರು.