ಚಿತ್ರದುರ್ಗ,ನಿತ್ಯವಾಣಿ,ಏ.8 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ರಂಗ ನಿರ್ದೇಶಕ ಕೆಪಿಎಮ್ ಗಣೇಶಯ್ಯ ತಮ್ಮ ಬೆಂಬಲಿಗರೊಂದಿಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಮಧ್ಯಾಹ್ನ ತಾಲ್ಲೂಕು ದಂಡಾಧಿಕಾರಿಗಳಾದ ಜೆ.ಸಿ ವೆಂಕಟೇಶಯ್ಯ ಅವರಿಗೆ ನಾಮಪತ್ರ ಸಲ್ಲಿಸಿದರು.
ನಂತರ ಕೆಪಿಎಮ್ ಗಣೇಶಯ್ಯ ಮಾತನಾಡಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಕ.ಸಾ.ಪ ಶತಮಾನೋತ್ಸವ ಆಚರಿಸಿದೆ. ಚಿತ್ರದುರ್ಗ ಜಿಲ್ಲಾಧ್ಯಕ್ಷ ಸ್ಥಾನದ ಸ್ಪರ್ಧಿಗಳು ಚುನಾವಣಾ ಭೂಮಿಕೆಯಲ್ಲಿದ್ದಾರೆ. ಕಸಾಪ ಆಜೀವ ಸದಸ್ಯರು ಸಮರ್ಥ ವ್ಯಕ್ತಿಯ ಅನ್ವೇಷಣೆಯಲ್ಲಿದ್ದಾರೆ. ಅವರ ವಿವೇಚನೆಗೆ ಒಳಪಟ್ಟು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಸಾಹಿತ್ಯ, ಸಾಂಸ್ಕøತಿಕ, ಸಂಘಟನೆ ಮುಂತಾದ ನಿರೀಕ್ಷೆ ಆಜೀವ ಸದಸ್ಯರ ಅಭಿಮತವಾಗಿದೆ. ಚಿಕ್ಕಂದಿನಿಂದಲೂ ಪತ್ರಿಕೋದ್ಯಮದ ಮಗುವಾಗಿ ಬೆಳೆದ ನನಗೆ ಸಾಹಿತ್ಯ, ಸಾಂಸ್ಕøತಿಕ ಕ್ಷೇತ್ರದಲ್ಲಿ ಬೆಳೆದು ಬಂದ ಬಗೆ ನನ್ನ ಆತ್ಮವಿಶ್ವಾಸದ ಪ್ರತೀಕವಾಗಿದೆ. ಹಿರಿಯರು ಕಟ್ಟಿ ಬೆಳೆಸಿದ ಕಸಾಪ ಚಟುವಟಿಕೆಗಳಿಗೆ ಹಿರಿಯರ ಮಾರ್ಗದರ್ಶನ ಪಡೆದು ಕನ್ನಡದ ರಥ ಮುನ್ನೆಡೆಸುತ್ತೇನೆ. ಪ್ರತಿ ಶಾಲೆಗಳಲ್ಲೂ ಕವಿಕಾವ್ಯ, ಸಾಹಿತ್ಯಿಕ, ಸಾಂಸ್ಕøತಿಕ ಪ್ರಗತಿ ಕಾರ್ಯಕ್ಕಾಗಿ ಶ್ರಮಿಸಲಾಗುವುದು. ಉದಯೋನ್ಮುಖ ಸಾಹಿತಿ, ಕವಿಗಳನ್ನು ಉತ್ತೇಜಿಸುವುದು ಹಾಗೂ ಕನ್ನಡ ಮನಸ್ಸುಗಳನ್ನು ಒಂದುಗೂಡಿಸಿ ಕನ್ನಡಪರ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಹಪ್ರಾಧ್ಯಾಪಕ ಪ್ರೊ. ಬಿ.ಮಂಜುನಾಥ, ರಾಘವೇಂದ್ರ ಶಿಕ್ಷಣ ಮಹಾ ವಿದ್ಯಾಲಯ ಪ್ರಾಚಾರ್ಯ ಡಾ.ಎಜಿ ಬಸವರಾಜಪ್ಪ, ಕೆಂಚಪ್ಪ ಕಲ್ಲುಮಾಳಿಗೆ, ಕಲಾ ಪರಿಚಾರಕ ಡಿ.ತಿಪ್ಪೇಸ್ವಾಮಿ, ಅಧೀಕ್ಷಕ ಮಲ್ಲೇಶಪ್ಪ, ಹಿರಿಯ ಕಲಾವಿದ ಎಂ.ಕೆ ಹರೀಶ್, ಛಾಯಾಚಿತ್ರಗ್ರಾಹಕ ಚಂದ್ರಪ್ಪ, ಪ್ರಕಾಶ್ ಬಾದರದಿನ್ನಿ, ಕೆ.ಮೋಹನ್ಕುಮಾರ್, ಕಿಶನ್ರಾಯ್ಕಪೂರ್, ಚಿತ್ರಕಲಾವಿದ ನವೀನಬೇದ್ರೆ, ಸಂಜೀವರೆಡ್ಡಿ, ಬಿ.ಮಂಜುಳ, ಸಾಯಿಕೃಷ್ಣ ಕಂಪ್ಯೂಟರ್ ಜಮದಗ್ನಿ, ಮಿಂಚು ಮಹೇಂದ್ರ ಇದ್ದರು.