ನಿತ್ಯವಾಣಿ,ಚಿತ್ರದುರ್ಗ,(ಮೇ.19) : ರಾಜ್ಯದಲ್ಲಿ ಕೋವಿಡ್ ಮಹಾಮಾರಿ ತಂಡವಾಡುತ್ತಿರುವಾಗ ಕಾಂಗ್ರೇಸ್ ಪಕ್ಷದ ನಾಯಕರುಗಳು ಲಸಿಕೆ ಹಾಕಿಸಬೇಡಿ ಎಂದು ಲಜ್ಜೆಗೆಟ್ಟ ರಾಜಕೀಯ ಮಾಡುತ್ತ, ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಲು ಕಾಂಗ್ರೇಸ್ ಪಕ್ಷದ ನಾಯಕರೇ ನೇರ ಕಾರಣಕರ್ತರು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಚಿವರು, ಕೊರೊನಾ ಸಂದರ್ಭದಲ್ಲಿ ವಿರೋದ ಪಕ್ಷದ ಜವಬ್ದಾರಿಯನ್ನು ಅರಿತು ಕೆಲಸ ಮಾಡಬೇಕಾದ ಕಾಂಗ್ರೇಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಬಿಜೆಪಿ ಪಕ್ಷದ ಲಸಿಕೆ ಅದನ್ನು ಹಾಕಿಸಬೇಡಿ, ಅದನ್ನು ಹಾಕಿಸಿದರೆ ಮಕ್ಕಳು ಆಗಲ್ಲ, ಸಾಯುತ್ತಾರೆ ಎಂದು ಅಪಪ್ರಚಾರ ಮಾಡುತ್ತಾ ಹೆಚ್ಚಿನ ಜನರ ಸಾವಿಗೆ ಕಾರಣರಾಗಿದ್ದಾರೆ. ಕಾಂಗ್ರೇಸ್ ನಾಯಕರು ಮತ್ತು ಕುಟುಂಬದವರು ರಾತ್ರೋರಾತ್ರಿ ಲಸಿಕೆ ಹಾಕಿಸಿಕೊಂಡು ಜನರಿಗೆ ಲಸಿಕೆ ಹಾಕಿಸಬೇಡಿ ಎಂದು ಹೇಳುವ ಕಾಂಗ್ರೇಸ್ ಗೆ ರಾಜ್ಯದಲ್ಲಿ ಸರ್ಕಾರ ನಡೆಸಬೇಕು ಮತ್ತು ಸಿಎಂ ಆಗಬೇಕು ಎಂಬುದಷ್ಟೇ ಉದ್ದೇಶವಾಗಿದ್ದು, ಆರೋಗ್ಯವಂತ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಲಸಿಕೆ ತರಿಸಲು ಸರ್ಕಾರದ ಬಳಿ ಹಣ ಇಲ್ಲ ನಾವು ಕೊಡುತ್ತೇವೆ ಎಂದು ಶಾಸಕರ ಅನುದಾನವನ್ನು ನೀಡುವುದಾಗಿ ಹೇಳಿರುವ ಕಾಂಗ್ರೇಸ್ ನಾಯಕರ ಹೇಳಿಕೆಗೆ ಲೇವಡಿ ಮಾಡಿದ ಶ್ರೀರಾಮುಲು, ಶಾಸಕರ ಅನುಧಾನ ಸರ್ಕಾರದ ಹಣವೇ ಹೊರತು ಅವರ ಸ್ವಂತ ಹಣ ಅಲ್ಲ. ಅದಕ್ಕಾಗಿಯೇ ಯಡಿಯೂರಪ್ಪ ಅವರು 6 ತಿಂಗಳ ಶಾಸಕರ ವೇತನ ಹಾಗೂ ಅನುದಾನವನ್ನು ಕೋವಿಡ್ಗೆ ಬಳಕೆ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದರು.
ದೇಶವು ಕೊರೊನಾ ಸಂಕಷ್ಟದಲ್ಲಿ ಸಿಲುಕಿದ್ದು, ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಸೇರಿದಂತೆ ಸಚಿವರು ಸಂಸದರು ಅಗಲಿರುಳು ಶ್ರಮಿಸುತ್ತಿದ್ದಾರೆ. ಆದರೂ ಕೂಡ ಕಾಂಗ್ರೇಸ್ ತನ್ನ ಲಜ್ಜೆಗೆಟ್ಟ ರಾಜಕೀಯ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶ ಕೆಳಮಟ್ಟಕ್ಕೆ ಬರುವಂತೆ ಮಾಡಿದ್ದಾರೆ ಎಂದು ಹೇಳಿದ ಅವರು ಇದೇ ವಿರೋಧ ಪಕ್ಷದಲ್ಲಿ ಕುಳಿತಿರುವ ಜೆಡಿಎಸ್ನ ದೇವೆಗೌಡ ಹಾಗೂ ಕುಮಾರಸ್ವಾಮಿ ಅವರುಗಳು ಕೊರೊನಾ ಸಂಬಂಧ ಸಾಕಷ್ಟು ಸಲಹೆ ಸಹಕಾರಗಳನ್ನು ನೀಡುತ್ತಾ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ ಅವರಿಗೆ ಧನ್ಯವಾದ ತಿಳಿಸಿದರು.
ಜನತೆ ಕಾಂಗ್ರೇಸ್ ನವರ ಮಾತನ್ನು ಕೇಳದೇ ಲಸಿಕೆ ಹಾಕಿಸಿ ಕೊಂಡು ತಮ್ಮಗಳ ಜೀವವನ್ನು ರಕ್ಷಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಸದ ನಾರಾಯಣಸ್ವಾಮಿ, ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ ಜಯಪಾಲಯ್ಯ ಡಿಎಚ್ಓ, ಡಿ.ಎಸ್. ಸೇರಿದಂತೆ ಇತರರು ಹಾಜರಿದ್ದರು.