ಚಿತ್ರದುರ್ಗ,ನಿತ್ಯವಾಣಿ,ಮಾ 30 , ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದುಕೊಂಡಿರುವ ಕ್ರೀಡಾಪಟುಗಳು ಮಾ.31ರೊಳಗೆ ರಾಜ್ಯ ನೌಕರರ ಸಂಘ ನೀಡಿರುವ ಸಂಘದ ತಂತ್ರಾಂಶದ ಲಿಂಕ್ ಬಳಸಿ ಅಗತ್ಯ ಮಾಹಿತಿಯನ್ನು ನೋಂದಾಯಿಸಿಕೊಳ್ಳುವಂತೆ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ಮಂಜುನಾಥ ಮನವಿ ಮಾಡಿದ್ದಾರೆ. ಜಿಲ್ಲಾ ನೌಕರರ ಸಂಘವು ಜಿಲ್ಲಾಡಳಿತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಕಾರದೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿದ್ದು, ಇಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಕೂಡಲೇ ರಾಜ್ಯ ಮಟ್ಟಕ್ಕೆ ನೋಂದಾಯಿಸಿಕೊಳ್ಳಲು ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರ ನಿರ್ದೇಶನ ನೀಡಿದ್ದು ಅದರಂತೆ ಕ್ರಮವಹಿಸಲು ಮನವಿ ಮಾಡಿದ್ದಾರೆ. ಈವರೆಗೂ ಕೇವಲ ಶೇ.50% ರಷ್ಟು ಕ್ರೀಡಾಪಟುಗಳು ಮಾತ್ರ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದು, ಮಾ.31ರೊಳಗೆ ಜಿಲ್ಲಾಮಟ್ಟದಲ್ಲಿ ಆಯ್ಕೆಯಾದ ಎಲ್ಲಾ ಕ್ರೀಡಾಪಟುಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಅವರು ಮನವಿ ಮಾಡಿದ್ದಾರೆ. ಕೂಡಲೇ ನೋಂದಾಯಿಸಿಕೊಳ್ಳುವಂತೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಜಿ.ಆರ್, ಖಜಾಂಚಿ ವೀರೇಶ್.ಟಿ ರಾಜ್ಯಪರಿಷತ್ ಸದಸ್ಯ ಕೆ.ಟಿ.ತಿಮ್ಮರೆಡ್ಡಿ, ಹಾಗೂ ಎಲ್ಲಾ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮುಖಾಂತರ ಮನವಿ ಮಾಡಿದ್ದಾರೆ.