ನಿತ್ಯವಾಣಿ,ಚಿತ್ರದುರ್ಗ, (ಜೂ.15) : ಪೆಟ್ರೋಲಿಯಂ ಪ್ರಾಡಕ್ಟ್ ಗಳನ್ನು ವ್ಯಾಟ್ ಅಡಿಗೆ ತಂದು ಗ್ರಾಹಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಜಿಲ್ಲಾ ಕಾಂಗ್ರೆಸ್ ಇಂಟೆಕ್ ಜಿಲ್ಲಾಧ್ಯಕ್ಷ ಅಶೋಕ್ ನಾಯ್ಡು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಭೀಮಸಮುದ್ರ ರಸ್ತೆ ದವಳಗಿರಿ ಬಡಾವಣೆಯಲ್ಲಿರುವ ಪೆಟ್ರೋಲ್ ಬಂಕ್ ಎದುರು ಮಂಗಳವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ವಿಧಿಸುತ್ತಿರುವುದರಿಂದ ಲೀಟರ್ಗೆ ನೂರು ರೂ.ದಾಟಿದೆ. ಕೊರೋನಾ ಲಾಕ್ಡೌನ್ನಲ್ಲಿ ಕೆಲಸವಿಲ್ಲದೆ ಮನೆಯಲ್ಲೆ ಕುಳಿತಿರುವ ಜನಸಾಮಾನ್ಯರು, ಬಡವರು, ಶ್ರಮಿಕರು, ಕಾರ್ಮಿಕರು, ದಿನನಿತ್ಯವೂ ಕೂಲಿ ಮಾಡಿ ದುಡಿದು ತಿನ್ನುವವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಚ್ಚಾ ತೈಲ ಕೇವಲ 32 ರೂ.ಗಳಿಗೆ ಲೀಟರ್ನಂತೆ ಸಿಗುತ್ತಿದ್ದು, ಕೇವಲ ಐವತ್ತು ರೂ.ಗೆ ಪೆಟ್ರೋಲ್, ನಲವತ್ತು ರೂ.ಗೆ ಡೀಸೆಲ್ನ್ನು ಗ್ರಾಹಕರಿಗೆ ನೀಡಬಹುದು. ಈ ಬಗ್ಗೆ ಬಿಜೆಪಿ ಸರ್ಕಾರ ಚಿಂತಿಸುತ್ತಿಲ್ಲ. ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಕೈಗೆಟುಕದಂತಾಗಿದೆ. ಕೂಡಲೆ ಬೆಲೆ ಏರಿಕೆಯನ್ನು ಇಳಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರುಳಾರಾಧ್ಯ, ಕಾರ್ಯದರ್ಶಿ ಎಲ್.ತಿಪ್ಪೇಸ್ವಾಮಿ, ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ, ಸೈಯದ್ ಖುದ್ದೂಸ್, ಶಶಾಂಕ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಹಸನ್ತಾಹೀರ್ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು..ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com