ಸರ್ಕಾರ ಶರಣರ ವಿಚಾರಕ್ಕೆ ಚ್ಯುತಿಯುಂಟು ಮಾಡಬೇಡಿ ; ಪಂಡಿತಾರಾಧ್ಯ ಶ್ರೀಗಳು

ಬಸವಕಲ್ಯಾಣದಲ್ಲಿ ನೂತನ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿ ಪೂಜೆ ಕಾರ್ಯಕ್ರಮದ ಜಾಹೀರಾತಿನಲ್ಲಿ ಉಲ್ಲೇಖವಾಗಿರುವ ‘ಸನಾತನ’ ಪದಕ್ಕೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಅನುಭವ ಮಂಟಪ ಸನಾತನಿಗಳ ಆಡಳಿತಕ್ಕೆ ಸಿಕ್ಕರೆ ಬಸವಾದಿ ಶಿವಶರಣರ ಸಮಾಜೋಧಾರ್ಮಿಕ ಚಿಂತನೆಯನ್ನು ಹಿಸುಕಿ ಮತ್ತೆ ಪುರೋಹಿತ ಪರಂಪರೆಯನ್ನು ಬೆಳಸಿದಂತೆ ಆಗುತ್ತದೆ. ಇಂತಹ ದೋಷಗಳು ಮುಂದೆ ಆಗದಂತೆ ಬಸವಾನುಯಾಯಿಗಳು ಜಾಗರೂಕರಾಗಿರಬೇಕಾಗಿದೆ. ಸರ್ಕಾರ ಸಹ ಶರಣರ ಆಚಾರ ವಿಚಾರಗಳಿಗೆ ಚ್ಯುತಿ ಬಾರದಂತೆ ಎಚ್ಚರವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಅನುಭವ ಮಂಟಪ ನಿರ್ಮಾಣದ ಭೂಮಿ ಪೂಜೆಯನ್ನು ಮುಖ್ಯಮಂತ್ರಿ ನೆರವೇರಿಸುವ ಜಾಹೀರಾತು ನೋಡಿ ಸಂತಸವಾಯಿತು. ಆದರೆ, ಆರಂಭದಲ್ಲೇ ಎದ್ದುಕಾಣುವ ‘ಸನಾತನ’ ಎಂಬ ಪದಬಳಕೆ ಗಮನಿಸಿದಾಗ ಮೊಸರಲ್ಲಿ ಕಲ್ಲು ಸಿಕ್ಕಂತಾಯಿತು. ಸನಾತನತೆ ಮತ್ತು ಪ್ರಗತಿಪರ ಶಬ್ದಗಳು ಪರಸ್ಪರ ವಿರುದ್ಧವಾದವು’ ಎಂದು ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಶರಣರದು ನಡೆ, ನುಡಿ ಒಂದಾದ ಪ್ರಾಯೋಗಿಕ ಮತ್ತು ವೈಚಾರಿಕ ಧರ್ಮ. ಅವರ ಹೋರಾಟ ಸನಾತನ ಗೊಡ್ಡು ಪರಂಪರೆಗಳ ವಿರುದ್ಧ ನಡೆದಿದೆ. ವೇದ, ಶಾಸ್ತ್ರ, ಪುರಾಣ, ಆಗಮಗಳ ವಿರುದ್ಧ ಧ್ವನಿ ಎತ್ತಿದ್ದನ್ನು ವಚನಗಳಲ್ಲಿ ಕಾಣಬಹುದು. ಈ ಸನಾತನ ಪರಂಪರೆಯವರೇ ಕಲ್ಯಾಣದಲ್ಲಿ ರಕ್ತಕ್ರಾಂತಿಯ ಬೀಜ ಬಿತ್ತಿ ವಚನ ಸಾಹಿತ್ಯವನ್ನು ಭಸ್ಮ ಮಾಡಲು ಮುಂದಾಗಿದ್ದು. ಅದರ ಪಳೆಯುಳಿಕೆಗಳು ಇಂದಿಗೂ ಜೀವಂತವಾಗಿವೆ’ ಎಂದು ಕಿಡಿ ಕಾರಿದ್ದಾರೆ.

Leave a Reply

Your email address will not be published.